“ಕಂಚಿಡ್ ಕುಲ್ಲುನು” ಇದೊಂದು ಸಂಬಂಧ ಕುದುರಿಸುವ ವ್ಯವಸ್ಥೆ. ಆ ಕಾಲದಲ್ಲಿ ಉಳ್ಳವರಿಂದ ಆರಂಭ ವಾಗಿದೆ. ತಮ್ಮ ಮಕ್ಕಳು ಯೌವನಕ್ಕೆ ಕಾಲಿಡುವ ಮುಂಚಿತವಾಗಿ ದೈವಸ್ಥಾನದಲ್ಲಿ ನಡೆಯುವ ಆಯನ ನೇಮ(ಅವನ ಸ್ಮರಣೆ- ದೈವದ ಹೆಸರು ಹೇಳಲು ಇಲ್ಲ) ದಿನಗಳಲ್ಲಿ ಕಂಚಿನ ವಿವಿಧ ವಿನ್ಯಾಸದ ಒಡವೆ ಆಭರಣ ಗಳನ್ನು ಧರಿಸಿ ಹೂವು ಮುಡಿದು ಅಲಂಕಾರ ಗೊಂಡು ಕಂಚಿನ ಮಣೆಯಲ್ಲಿ ಕೂತು ಕಂಚಿನ ದೀಪಗಳ ಎದುರ ಲ್ಲಿ ಕಂಚಿನ ಹರಿವಾಣದಲ್ಲಿ ಅಕ್ಕಿ ಕಾಯಿ,ಎಲೆ ಅಡಿಕೆ ಇಟ್ಟು ಸ್ಮರಣೆ ಮಾಡುವುದು. ಈ ಕಾಲದಲ್ಲಿ ಕೋಟಿ ಚೆನ್ನಯರು ಹುಟ್ಟಿರಲಿಲ್ಲ. “ಗರಡಿ”ಎಂಬ ಹೆಸರು ಇರಲಿಲ್ಲ. “ಕಂಚಿಡ್ ಕುಲ್ಲುನು”ಎಂದರೆ ಸೇವೆ ಅಥವಾ ಹರಕೆಯ ಕಾರ್ಯಕ್ರಮ ಆಗ ಆಗಿರಲಿಲ್ಲ. ರಾಜನ್ ದೈವಸಾನಗಳಲ್ಲಿ ನಡೆಯುತ್ತಿದ್ದ ಉತ್ಸವ ದೊಂದಿಗೆ ಶ್ರೀಮಂತರ ಇನ್ನೊಂದು ಕಾರ್ಯಕ್ರಮ ಅದಾಗಿತ್ತು. ತಮ್ಮ ಮಕ್ಕಳನ್ನು ತಮ್ಮದೇ ಸಮಾಜದವರು ನೋಡಲೆಂದು ಪ್ರದರ್ಶಿಸುವುದು.

ಅಂದಿನ ಸಮಯದಲ್ಲಿ ಜೈನ ಬೂತ(ರಾಜೆನೇ ದೈವ-ರಾಜನ ಮರಣದ ನಂತರ ದೈವ ಆಗಿರುವುದು)ದ ಸ್ಮರಣೆ ಆರಾಧನೆ ಕಾರ್ಯಕ್ರಮಗಳಲ್ಲಿ ಬೇರೆ ಊರಿನ ಜೈನ ಕುಟುಂಬದವರನ್ನು ಆಹ್ವಾನ ಮಾಡುವುದು ಇತ್ತು. ಅದೇ ರೀತಿ ಅವರು ಬರುತ್ತಿದ್ದರು. ಅಂದು ಅವರು ಬಂದವರು ಇಲ್ಲಿ”ಕಂಚಿಡ್ ಕುಲ್ಲುನು” ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ವೀಕ್ಷಿಸು ವರು. ಮಕ್ಕಳ ವಯಸ್ಸನ್ನು ಅಳೆಯುವರು. ಮುಂದಿನ ವರ್ಷಗಳಲ್ಲಿ ವಧು ವರರ ಅನ್ವೇಷಣೆಯಲ್ಲಿ ಹಿಂದೆ “ಕಂಚಿಡ್ ಕುಲ್ಲುನು” ಕಾರ್ಯಕ್ರಮಗಳಲ್ಲಿ ಕಂಡ ಬಾಲಕ ಬಾಲಕಿಯರನ್ನು ನೆನಪಿಸಿಕೊಂಡು ಸಂಬಂಧ ಕುದುರಿಸಲು ಪ್ರಯತ್ನಿಸುವುದು. ಹಿಂದೆ ಎಲ್ಲಾ ಮದುವೆ ಎಂಬುದು ಬೇಗನೇ ನಡೆಯುತ್ತಿತ್ತು. “ಕಂಚಿಡ್ ಕುಲ್ಲುನು”ಕಾರ್ಯಕ್ರಮ ಕಂಡು ಮನೆ ಹಿರಿಯರು ರಹಸ್ಯವಾಗಿ ತಮ್ಮ ತಮ್ಮ ಮಕ್ಕಳಿಗೆ ಸಂಬಂಧಗಳನ್ನು ಎರಡೂ ಮನೆ ಹಿರಿಯರು ಅವರವರೊಡನೆ ಮಾತಾಡಿ ಮಾತುಕತೆ ನಡೆಸುತ್ತಿದ್ದರು. ಸಂಬಂಧ ಗಟ್ಟಿ ಮಾಡುವ ಮಾತುಕತೆ ನಡೆಯುತ್ತಿತ್ತು. ಹೆಣ್ಣು ಗಂಡು ಮಕ್ಕಳು ಪ್ರಾಯಕ್ಕೆ ಬಂದ ಮೇಲೆ ಮದುವೆ ಮಾಡುವುದು.  “ಕಂಚಿಡ್ ಕುಲ್ಲುನು”ಕಾರ್ಯಕ್ರಮದಲ್ಲಿ ಮಕ್ಕಳನ್ನು ಮದುಮಗ ಮದುಮಗಳಂತೆ ಅಲಂಕಾರ ಶೃಂಗಾರ ಮಾಡೋದು ಅದೇ ಮದುವೆಯ ಉದ್ದೇಶ.ಆ ಕಾಲದಲ್ಲಿ ಬೆಳ್ಳಿ ಬಂಗಾರವು ಇನ್ನೂ ತುಲುನಾಡಲ್ಲಿ ಬಂದಿರಲಿಲ್ಲ. ಕಂಚು ಎಂದರೆ ಬಹಳ ಪವಿತ್ರ ಮತ್ತು ಶ್ರೀಮಂತರ ಪ್ರತಿಷ್ಠಿತ ಒಡವೆ ಆಭರಣವಾಗಿತ್ತು. ಕಂಚಿ ನ ವಿವಿಧ ವಿನ್ಯಾಸದ ಆಭರಣಗಳನ್ನು ಧರಿಸಿ ಹೂವುಗಳಿಂದ ಅಲಂಕಾರಗೊಂಡು ಕಂಚಿನ ಮಣೆಯಲ್ಲಿ ಮಕ್ಕಳು ಕೂರುವುದು.  ಇದನ್ನೇ “ಕಂಚಿಡ್ ಕುಲ್ಲುನು”ಎಂದು ಕರೆದರು.

 

ಅಂದು “ಆಯನ ನೇಮ” ಆರಾಧನೆಗಳಲ್ಲಿ ಬೇರೆ ಬೇರೆ ಊರಿನ ಜೈನ ಕುಟುಂಬಗಳು ಸಂಬಂಧ ಗಿಟ್ಟಿಸುವ ಉದ್ದೇಶದಿಂದಲೇ ಪಾಲ್ಗೊಳ್ಳುವುದು ಇತ್ತು. ಇತರ ಜಾತಿ ಜನರು ದೈವಗಳ ಆಯನ ನೇಮದಲ್ಲಿ ಪಾಲ್ಗೊಂಡಿರುತ್ತಿದ್ದರೂ “ಕಂಚಿಡ್ ಕುಲ್ಲುನು” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ತುಲುನಾಡ ಲ್ಲಿ ಕೋಟಿ ಚೆನ್ನಯರ ಜನನದ ಬಳಿಕ ಅವರು “ಗರಡಿ” ಎಂದು ಕರೆಯುವ ಮನೆಯಲ್ಲಿ ಪಳಗುತ್ತಾರೆ ಬಾಳುತ್ತಾರೆ. ಅವರ ಮರಣದ ಬಳಿಕ “ರಾಜೆನೇ ದೈವ”ಸ್ಥಾನದ ಬಳಿ ಪವಾಡ ಪುರುಷರು ಎಂದೆನಿಸಿದ ಕೋಟಿ ಚೆನ್ನಯರನ್ನೂ “ಗರಡಿ”ಒಳಗೆ ನಂಬುತ್ತಾರೆ. ಇದಕ್ಕೆ ಜೈನ ರಾಜರ ಪ್ರೋತ್ಸಾಹ ಇತ್ತು.ನಂತರದಲ್ಲಿ ಊರಿನ ಬೂತಾಲಯಗಳನ್ನು ಬೂತ ಸಾನ, ಗರಡಿ ಎಂಬ ಹೆಸರಲ್ಲೂ ಕರೆದರು.

ಜೈನರ ಖಾಸಗಿ “ಕಂಚಿಡ್ ಕುಲ್ಲುನು” ಕಾರ್ಯಕ್ರಮ ಕ್ರಮೇಣ ಸಾರ್ವಜನಿಕ ಕಾರ್ಯಕ್ರಮ ಆಗಿ ತಿರುಗಿತು. ಇದು ಹರಕೆ, ಸೇವೆ,ಆರಾಧನೆ, ಎಂಬ ಹೆಸರಲ್ಲಿ ನಡೆಯಲು ಆರಂಭಿಸುವುದು. ಕಂಚಿಲ ಬಾಲೆ,ಕಂಚಿಲ್ದ ಬಾಲೆ ಎಂಬ ಹೆಸರುಗಳಲ್ಲಿ ನಡೆಯಿತು. ಮೊದಲೇ ಹೇಳಿದಂತೆ ಅಂದು ತುಲುನಾಡಲ್ಲಿ ಬಂಗಾರಕ್ಕಿಂತ ಕಂಚು ಶ್ರೇಷ್ಠ ಎಂದಿತ್ತು. ಹೆಚ್ಚಿನ ವಿವಿಧ ಕಂಚಿನ ಒಡವೆಗಳನ್ನು ಧರಿಸುತ್ತಿದ್ದರು. ಕಂಚಿನ ಒಡವೆಗಳನ್ನು ತಯಾರಿಸುವ “ಕಂಚಿಕಾರ “ಎಂದು ಕರೆಸಿಕೊಳ್ಳುವ ಕಂಚಿನ ಕೆಲಸಗಾರರು ಇದ್ದರು. ಕಂಚಿಲ, ಕಂಚಿಕಾರ ಬೈಲು ಇತ್ಯಾದಿ ಊರುಗಳಲ್ಲಿ ಕಂಚಿನ ವಿವಿಧ ವಿನ್ಯಾಸದ ಧರಿಸುವ ಒಡವೆಗಳನ್ನು ಮಾಡುತ್ತಿದ್ದರು. ಈಗಲೂ ಕೆಲವು ಹಳ್ಳಿಗಳಲ್ಲಿ “ಕಂಚಿಕರ್ರೆ ಇಲ್ಲ್”ಎಂದು ಕರೆಯುವ ಮನೆಗಳಿಗೆ. ತುಲುನಾಡಲ್ಲಿ ಅಂದು ಬಂಗಾರಗಿಂತ “ಕಂಚಿನ ಯುಗ” ಇತ್ತು. ತುಲುವ ಜೈನ ಬಸದಿಗಳಲ್ಲಿ ತೀರ್ಥಂಕರರ ಪ್ರತಿಮೆ ಕಂಚಿನಿಂದ ಮಾಡುವುದು ಇತ್ತು. ಕಂಚಿನ ಮಣೆ,ಕುರ್ಚಿಗಳು ಹರಿವಾಣಗಳು,ದೀಪ ಆರತಿಗಳು ,ಚೆಂಬು, ಬಸದಿಯ ದಾರಂದ ಬಾಗಿಲುಗಳು ಕಂಚುಗಳಿಂದಲೇ ಮಾಡುತ್ತಿದ್ದರು. ಜೈನರು ಬಸದಿಯ ನಿರ್ಮಾಣಕ್ಕೆಂದು ಕಲ್ಲಿನ ಶಿಲ್ಪಿಗಳನ್ನು ತಮಿಲು ದೇಶದಿಂದ ಕರೆದುಕೊಂಡು ಬಂದಿದ್ದರು. ಅವರಂತೆ ಕಂಚುಕಾರರನ್ನೂ ತುಲುನಾಡಿಗೆ ಕರೆದುಕೊಂಡು ಬಂದಿದ್ದರು.

ಅಂದು “ಕಂಚಿಡ್ ಕುಲ್ಲುನು” ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಜೈನರು ತಮ್ಮ ಮಕ್ಕಳಿಗೆ ಬೇರೆ ಬೇರೆ ಹೆಸರಿನ ವಿವಿಧ ವಿನ್ಯಾಸದ ಕಂಚಿನ ಒಡವೆಗಳನ್ನು ತಯಾರಿಸಿ ಧರಿಸಲು ಕೊಡುತ್ತಿದ್ದರು. ಮತ್ತು “ಕಂಚಿಡ್ ಕುಲ್ಲುನು”ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಅವುಗಳು ಎಂದರೆ ಮೂಂಕುತ್ತಿ,ಬೆಂಡೊಲೆ,ಓಪಲ್,ಕೊಪ್ಪು,ಬಜಿಲ್ ಸರ ಬಗೆ ಬಗೆಯ ಉಂಗುರಗಳು,ಬುಗುಡಿ,ನೆಕ್ಲೇಸ್,ಬಳೆಗಳು,ಮುಂದಲೆ,ಡಾಬು,ತಾಲಿಬಂದಿ,ಸೊಂಟ ಪಟ್ಟಿ ಇತ್ಯಾದಿ ಇತ್ಯಾದಿ. “ಕಂಚಿಡ್ ಕುಲ್ಲುನು” ಎಂದರೆ ಜೈನರ ಸಾಂಪ್ರದಾ ದಾಯಿಕ ಕಾರ್ಯಕ್ರಮ. ತಮ್ಮ ಗುತ್ತು ಗತ್ತಿನ ಪ್ರತಿಷ್ಠಿತ ಪ್ರದರ್ಶನದ ಭಕ್ತಿ ಆರಾಧನಾ ಕ್ರಮ. ಇದರೊಂದಿಗೆ ತಮ್ಮ ಮುಂದಿನ ಪೀಳಿಗೆಯ ಮುಂಜಾಗ್ರತಾ ಕ್ರಮ ವಾಗಿತ್ತು. ಆಯನ ನೇಮಗಳಲ್ಲಿ ಜೈನ ಮನೆತನಗಳು ಒಟ್ಟಾಗಿ ದೈವವನ್ನು ಆರಾಧಿಸುವುದು ಮತ್ತು ತಮ್ಮ ಮುಂದಿನ ಪೀಳಿಗೆಯ ಬಗ್ಗೆ ಚಿಂತಿಸಿ ಮಾತುಕತೆಯನ್ನು ನಡೆಸುವುದು ಆಗಿತ್ತು. “ಕಂಚಿಡ್ ಕುಲ್ಲುನು” ಎಂದರೆ ಬಾಲ್ಯ ವಿವಾಹ ಎಂದಲ್ಲ. ಬದಲಾಗಿ ತಮ್ಮ ಮಕ್ಕಳನ್ನು ಇತರ ಜೈನ ಮನೆತನದವರಿಗೆ ತೋರಿಸಿ ವಿಜೃಂಭಿಸುವ ಆಚರಣೆ. ಆ ಊರಿಗೆ ಈ ಊರಿನವರುಹೋಗುವುದು ಮತ್ತು ಈ ಊರಿನವರು ಆ ಊರಿಗೆ ಹೋಗುವುದು. ಬಾಂಧವ್ಯವನ್ನು ಹೆಚ್ಚಿಸಿ ಕೊಳ್ಳುವುದು.ನಂತರದ ವರ್ಷಗಳಲ್ಲಿ ಸಂಬಂಧವನ್ನು ಕುದುರಿಸಲು ಇದು ನೆರವಾಗುತ್ತಿತ್ತು.

Leave a Reply

Your email address will not be published. Required fields are marked *