
ಇನ್ನೂ ನನಗೆ ಮೂರು ತುಂಬಿರಲಿಲ್ಲ. ಅಂದಿನ ಆ ಘಟನೆಯನ್ನು ನೆನೆದರೆ ನಾನು ಪುಟ್ಟ ಮಗುವಾಗಿ ಬಿಡುತ್ತೇನೆ. ಆ ರಾತ್ರಿ ತಾಯಿ ಮಡಿಲಲ್ಲಿ ಮಗುವಾಗಿ ಮಲಗಿದ್ದ ನಾನು ಒಮ್ಮೆಲೆ ಬಾಲಗೃಹ ಎಂಬ ಕಾಯಿಲೆ ಒಳಗೆ ಬೀಳುತ್ತೇನೆ. ಪ್ರಜ್ಞೆ ತಪ್ಪಿರುತ್ತದೆ. ತಾಯಿ ಬೊಬ್ಬಿ ಡುತ್ತಿದ್ದರು. ಮನೆಮಂದಿ ಎಚ್ಚರಗೊಳ್ಳುವರು. ತಂದೆಯವರು ಓಡೋಡಿ ನೆಕ್ಕಿ ಸೊಪ್ಪು ತಂದರು. ಆಗಲೇ ದೊಡ್ಡ ಅಕ್ಕ ಮಣ್ಣಿನ ಅಂಚಿನಲ್ಲಿ ಕೆಂಡ ತಯಾರಿಸಿದ್ದರು. ಬೆಳ್ಳು ಳ್ಳಿ ಸಿಪ್ಪೆ,ಕಾಗದದ ಚೂರು, ನೆಕ್ಕಿ ಎಲ್ಲವನ್ನು ಕೆಂಡದ ಮೇಲೆ ಹಾಕಿದಾಗ ಬಂದ ಹೊಗೆಗೆ ತಾಯಿಯವರು ಮಗು ಆಗಿದ್ದ ನನ್ನನ್ನು ಹೊಗೆಯ ಮೇಲೆ ಹಿಡಿದಾಗ ನನಗೆ ಪ್ಪಜ್ಞೆ ಬರುವುದು. ಇಲ್ಲಿ ನನಗೆ ನೆನಪಿನಲ್ಲಿ ಇರುವುದು ನಾನು ಹೊಗೆಯ ಮೇಲೆ ತೇಲಾಡುತ್ತಿರುವ ದೃಶ್ಯ ಮಾತ್ರ. ಇದರ ಮೊದಲ ಎಲ್ಲಾ ಸನ್ನಿವೇಶಗಳು ತಾಯಿ ದೇವರು ನಂತರದ ವರ್ಷಗಳಲ್ಲಿ ಹೇಳಿರುವುದು. ತಾಯಿ ಆಕೆ ಬದುಕಿನಲ್ಲಿ ಅನುಭವಿಸಿದ್ದ ಮಾನಸಿಕ ಒತ್ತಡದ ಪರಿಣಾಮವಾಗಿ ಮಕ್ಕಳಿಗೆ ಈ ಕಾಯಿಲೆ ಬರುತ್ತದೆ. ತಾಯಿ ಆಗಾಗಲೇ ಏಳು ಮಕ್ಕಳಿಗೆ ಜನ್ಮ ಕೊಟ್ಟಿದ್ದರು. ನಾನು ಎಂಟನೆಯ ಮಗು ಆಗಿದ್ದೆ. ತಾಯಿ ದೇವರು ಅದೆಷ್ಟು ಕಷ್ಟ ಅನುಭವಿಸಿದ್ದರು ಎಂದು ಅರಿಯಬಹುದು.
ನಾನು ಮಗು ಆಗಿದ್ದ ದಿನದಿಂದಲೂ ಜಂತು ಹುಳ ಬಾಧೆಯಿಂದ ಬಳಲುತ್ತಿದ್ದೆ. ದಿನಾ ರಾತ್ರಿ ಆಯಿತೆಂದರೆ ತಾಯಿ ದೇವರು ಗುದ ದ್ವಾರಕ್ಕೆ ಹೊನ್ನೆ ಎಣ್ಣೆಯನ್ನು ಬೆರಳಿನಿಂದ ಹಚ್ಚುತ್ತಿದ್ದ ನೆನಪು ಬರುತ್ತದೆ. ನನ್ನ ತಂಗಿ ತೊಟ್ಟಿಲಲ್ಲಿ ಮಲಗಿದ್ದರೆ ನನ್ನ ತಮ್ಮ ಇನ್ನೊಂದು ಮಗ್ಗು ಲಲ್ಲಿ ಮಲಗಿದ್ದ ದೃಶ್ಯ ಕಾಣುತ್ತದೆ. ತಾಯಿ ತನ್ನ ಮಕ್ಕಳಿಗಾಗಿ ಅದೆಷ್ಟು ನೋವು ಅನುಭವಿಸಿದ್ದರು ಎಂದು ಹೇಳಲು ಸಾಧ್ಯವಿಲ್ಲ.
ತಾಯಿ ದೇವರಿಗೆ ಮಕ್ಕಳನ್ನು ಸಲಹುವ ಒಡನೆ ಹಟ್ಟಿ ತುಂಬಾ ಇರುವ ಹಸು ಕರುಗಳನ್ನೂ ನೋಡುವ ಕೆಲಸ ಇತ್ತು. ಅದರೊಡನೆ ಹೊಲ ಗದ್ದೆಗಳ ಕೆಲಸವೂ ಬಹಳ ಇತ್ತು.ನಾಟಿ,ಕೊಯಿಲು ಕೂಲಿ ಆಳುಗಳನ್ನು ನೋಡಿ ಅವರಿಗೆ ಮಜೂರಿ ಸಂದಾಯ ಮಾಡುವ ಕೆಲಸ ಇತ್ತು. ಹಬ್ಬ ಹರಿದಿನಗಳಲ್ಲಿ ಅವರು ತುಂಬಾ ಬ್ಯುಸೀ ಇರುತ್ತಿ ದ್ದರು. ದೈವರಾಧನೆ,ದೇವರಾಧನೆಯಲ್ಲಿ ಅತೀವ ಭಕ್ತಿ. ಮಕ್ಕಳಿಗೆಲ್ಲಾ ಧಾರ್ಮಿಕತೆಯ ಪಾಠ ಕಲಿಸುತ್ತಿದ್ದರು. ಇದರೊಡನೆ ಸ್ವಚ್ಛತೆಯ ಬಗ್ಗೆ ದಿನಾ ಹೇಳುತ್ತಾ ಸುಸ್ತಾ ಗುತ್ತಿದ್ದರು. ಇನ್ನೊಂದೆಡೆ ತಂದೆಯವರ ಎದುರಿಗೆ ಬಂದು ಅವರ ಮಾತು ಕೇಳ ಬೇಕಿತ್ತು.
ಯುಗಾದಿ,ದೀಪಾವಳಿ,ಶ್ರೀ ಕೃಷ್ಣಾಷ್ಟಮಿ ಹಬ್ಬಗಳಲ್ಲಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸಲು ಅವರು ಕಾರ್ಲ, ಬೆದ್ರ ಸಂತೆಗಳಿಗೆ ಹೋಗಿ ಉಡುಪು ತಂದ ನೆನಪಿದೆ. ಇದಕ್ಕೆ ತಂದೆ ಮತ್ತು ಹಿರಿಯ ಮಕ್ಕಳಿಂದ ಹಣ ವಸೂಲು ಮಾಡುವ ದೃಶ್ಯ ಕಣ್ಣಿಗೆ ಕಾಣಿಸುತ್ತದೆ. ಮನೆಗೆ ಕೆಲಸ ಕ್ಕೆ ಬರುತ್ತಿದ್ದವರಿಗೆಲ್ಲಾ ಹಬ್ಬಗಳ ದಿನಗಳಲ್ಲಿ ಖುಷಿ ಖುಷಿಯಿಂದ ಅಕ್ಕಿ, ಕಾಯಿ,ತರಕಾರಿ ಕೊಡುತ್ತಿದ್ದರು.
ನನ್ನನ್ನು ಶಾಲೆಗೆ ಕಳುಹಿಸುವ ಗೌಜಿ. ಅದು ಹೊಸ ಶಾಲೆ. ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು. ಆಗಲೇ ಒಂದನೇ ತರಗತಿಯನ್ನು ಒಂದು ದೊಡ್ಡ ಗುತ್ತು ಮನೆಯಲ್ಲಿ ಆರಂಭಿಸಲಾಗಿತ್ತು. ಆ ಮನೆಯ ಹೆಸರು “ಕೋರಂಜೆ”. ತರಗತಿಗೆ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಇನ್ನೂ ಆರು ವರ್ಷ ಪೂರ್ತಿ ಆಗದವರನ್ನೂ ಆರು ವರ್ಷ ಎಂದು ಅಂದು ಸೇರಿಸಿದ್ದರು .ಅದರಂತೆ ನನಗೆ ಐದು ವರ್ಷ ಪೂರ್ತಿ ಆಗದಿದ್ದರೂ ಆ ಶಾಲೆಗೆ ಸೇರಿಸಲಾಗಿತ್ತು. ಹಾಯರ್ ಪ್ರೈಮರಿ ಶಾಲೆ ದೂರ ಇದ್ದುದರಿಂದ ಈ ಹೊಸ ಶಾಲೆ ಮನೆ ಪಕ್ಕನೆ ಇದ್ದುದರಿಂದ ತಾಯಿಯೇ ತಂದು ಸೇರಿಸಿದ್ದರು. ಇನ್ನೂ ನೆನಪಿದೆ ಶಾಲೆಗೆ ಸೇರಿಸಲು ನನಗೆ ತಂದ ಒಂದು ಜೊತೆ ಅಂಗಿ ಚಡ್ಡಿಯ ಬಣ್ಣ ಗುಲಾಬಿ ಮತ್ತು ಕಪ್ಪು ಆಗಿತ್ತು. ವರುಷಗಳು ಉರುಳಿದವು.
ಮನೆಯಲ್ಲಿ ಅಂದಿನ ಸಂಪ್ರದಾಯ ಸಂಸ್ಕೃತಿಯ ಪಾಠವನ್ನು ಹೇಳುತ್ತಿದ್ದರು.ಅದರೊಡನೆ ಹಂಚಿ ತಿನ್ನುವಸ್ವಭಾವ ಇರಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದ್ದರು.ಎರಡನೆಯ ತರಗತಿಯಲ್ಲಿ ಓದುತ್ತಿದ್ದ ಕಾಲ ಅದಾಗಿತ್ತು.ಎಂದಿನಂತೆ ಬೆಳಿಗ್ಗೆ ಶಾಲೆಗೆ ನಡೆಯುತ್ತಾ ಹೋಗುವಾಗಮುಂಡಪ್ಪ ಮಾವಿನ ಮರದಡಿಯಲ್ಲಿ ಬೃಹತ್ ಮಾವಿ ನ ಹಣ್ಣು ಸಿಗುತ್ತೆ.ಖುಷಿಯಿಂದ ತಿನ್ನುವ ಎಂದಾಗ ತಾಯಿ ದೇವರ ಹಂಚಿ ತಿನ್ನುವ ವಾಕ್ಯ ನೆನಪಾಗುತ್ತದೆ. ಚಡ್ಡಿ ಕಿಸೆಗೆ ಹಣ್ಣು ಹೋಗುವುದಿಲ್ಲ.ಕಾಕಿ ಬಟ್ಟೆಯ ಚೀಲದೊಳಗೆ ಹಣ್ಣು ಕಂಡರೆ ಮೇಸ್ಟ್ರು ,ಉಳಿದ ಮಕ್ಕಳು ನೋಡುತ್ತಾರೆ ಎಂಬ ಭಯ ಆಗುತ್ತೆ.ಕೊನೆಗೆ ಮರದಡಿಯಲ್ಲಿ ಒಂದೆಡೆ ಅಡಗಿಸಿಟ್ಟು ಅದರ ಮೇಲೆ ತರೆಗೆಲೆ ರಾಶಿ ಹಾಕಿ ಶಾಲೆಗೆ ಹೋದೆ.
ಕ್ಲಾಸಿನಲ್ಲಿ ಮುಂಡಪ್ಪ ಮಾವಿನ ಹಣ್ಣಿನದೇ ಚಿಂತೆ. ಎಂದು ಊಟಕ್ಕೆ ಬಿಡುತ್ತಾರೆ,ಎಂದು ಹಣ್ಣು ಕೊಟ್ಟು ತಾಯಿಯನ್ನು ಖುಷಿ ಪಡುತ್ತೇನೆಂಬ ಆತುರ. ಗಂಟೆ ಢಣ ಢಣ ಬಾರಿಸಿತು. ಓಡಿದೆ ಮುಂಡಪ್ಪನಿಗಾಗಿ. ಆಗಲೇ ಯಾರೋ ಅದನ್ನು ಎತ್ಕೊಂಡು ಹೋಗಿದ್ದರು. ಬಿಕ್ಕಿ ಬಿಕ್ಕಿ ಅಳುತ್ತಾ ಓಡಿದೆ. ತಾಯಿಯನ್ನು ಅಪ್ಪಿ ಕೊಂಡು ಕತೆ ಹೇಳಿದೆ. ನೀವು ಹಂಚಿ ತಿನ್ನ ಬೇಕು ಎಂದು ಹೇಳಿದ್ದೀರಲ್ಲವೇ?ಎಂದಾಗ ತಾಯಿಗೆ ಆದ ಖುಷಿಯ ಆ ತಾಯಿ ದೇವರ ಮುಖವನ್ನು ಈಗಲೂ ಕಾಣುತ್ತೇನೆ. ನನ್ನ ಸಮಧಾನಿಸಿ ನೆಕ್ಕರೆ ಮಾವಿನಹಣ್ಣು ತಿನ್ನಿಸಿ ಉಣ್ಣಿಸಿ ಶಾಲೆಗೆ ಕಳುಹಿಸಿದರು.
ಐದನೆಯ ತರಗತಿಯಲ್ಲಿ ಓದುತ್ತಿದ್ದ ಕಾಲ. ಫೋಟೊ ತೆಗೆಯುವ ಕಾರ್ಯಕ್ರಮ ಇದೆ ಎಂದಿದ್ದರು ಮೇಸ್ಟ್ರು. ಒಳ್ಳೆಯ ಬಟ್ಟೆ ಧರಿಸಿ ಬರಲು ಹೇಳಿದ್ದರು. ನನ್ನಲ್ಲಿ ಒಳ್ಳೆಯ ಬಟ್ಟೆ ಇದ್ದಿರಲಿಲ್ಲ. ಅದಕ್ಕಾಗಿ ತಾಯಿ ಕಾರ್ಲದ ಸಂತೆಯಿಂದ ಹೊಸ ಬಟ್ಟೆ ತಂದಿದ್ದರು. ಶರ್ಟ್ ಬಣ್ಣ ಕಪ್ಪು ಕೆಂಪು ಆಗಿತ್ತು. ಬಟ್ಟೆ ಚೆನ್ನಾಗಿಲ್ಲ ಎಂದು ನಾನು ಅತ್ತಿದ್ದೆ. ಅದು ಫೋಟೊಗೆ ಚೆನ್ನಾಗಿ ಬರುತ್ತೆ ಎಂದು ತಾಯಿ ವಾದವಾಗಿತ್ತು. ನನ್ನ ಅಳುವು ಅವರನ್ನು ಸುಸ್ತಾ ಗಿಸಿತ್ತು. ಕೊನೆಗೆ ಫೋಟೊದಲ್ಲಿ ಎಲ್ಲರಿಗಿಂತಲೂ ನನ್ನ ಫೋಟೋ ಚಂದವಾಗಿತ್ತು. ತಾಯಿ ನನ್ನ ಫೋಟೋ ನೋಡಿ ಖುಷಿ ಖುಷಿಯಿಂದ ಇತರರಿಗೆ ತೋರಿಸಿದ ಆ ಕ್ಷಣದ ದೃಶ್ಯ ಕಣ್ಣೆದುರು ಬರುತ್ತದೆ.
ಏಳು ಪಾಸಾಗಿ ಹೈಸ್ಕೂಲು ಹೋಗುವ ಸಡಗರ. ತಾಯಿಯವರು ಮಗ ದೊಡ್ಡ ಶಾಲಿಗೆ ಹೋಗುವನು ಎಂದು ಸಂತೆಯಿಂದ ಹೊಸ ಎರಡು ಜತೆ ಅಂಗಿ ಚಡ್ದಿ , ಕೊಳೆ ಆದರೆ ಕಾಣ ಬಾರದೆಂದು ಕಪ್ಪು ಬಣ್ಣದ ಬಟ್ಟೆ ಯ ಸ್ಕೂಲ್ ಬ್ಯಾಗ್ ತಂದಿದ್ದರು. ವಿಶೇಷ ಎಂದರೆ ಕಾಲಿಗೆ ಒಂದು ಜತೆ ಹವಾಯ್ ಚಪ್ಪಲಿ ತಂದಿರುವ ಖುಷಿ. ಅದನ್ನು ಪ್ರಪ್ರಥಮವಾಗಿ ಕಾಲಿಗೆ ಧರಿಸಿ ಎಲ್ಲರಿ ತೋರಿಸಿ ಸುತ್ತಾಡಿದ್ದು. ಅದು ಸವೆದು ಹೋಗುತ್ತೆ ಎಂದು ಅದನ್ನು ಕಲೆಂಬಿ ಒಳಗೆ ಇಟ್ಟಿರುವ ನೆನಪಿದೆ. ಆ ಕಲೆಂಬಿ ಈಗಲೂ ನಾನು ಬೆಳೆದ ಮನೆಯಲ್ಲಿ ಇದೆ. ಶಾಲೆ ಕಾಲೇಜಿಗೆ ಹೋಗುವಾಗ ನನ್ನ ಬುತ್ತಿಗಾಗಿ ಹಿಂದಿನ ದಿನದ ಪದಾರ್ಥವನ್ನು ಉಳಿಸಿ ಹಾಕಿದ ಆ ದಿನವನ್ನು ಮರೆಯಲಾಗದು .ಹತ್ತನೆಯ ತರಗತಿಯಲ್ಲಿ ಲೆಕ್ಕದಲ್ಲಿ ಫೇಲ್ ಆದಾಗ ನಾನು ಬೊಂಬಾಯಿಗೆ ಹೋಗುವೆ ಎಂದೆ. “ಬೊಂಬಾಯಿಗೆ ಹೋಗಿ ಗ್ಲಾಸ್ ತೊಳೆಯುತ್ತೀಯಾ”ಎಂದು ಧೈರ್ಯ ತುಂಬಿಸಿ ಪರೀಕ್ಷೆ ಕಟ್ಟಿಸಿದರು. ಪಾಸಾಗಿ ಕಾಲೇಜ್ ಸೇರಿದೆ.
ತಂದೆ ತಾಯಿಯವರು ತಿರುಪತಿ ಮಂತ್ರಾಲಯಕ್ಕೆ ಹೋಗಿ ಬಂದ ಮೇಲೆ ತಾಯಿಯವರು ರಾಘವೇಂದ್ರ ಸ್ವಾಮಿಗಳವರ ಪರಮ ಭಕ್ತೆ ಆಗುವರು. ಗುರುವಾರ ದಿನ ಮಾಂಸಾಹಾರ ತ್ಯಜಿಸುವ ಮೂಲಕ ಅವರು ರಾಯರ ಆರಾಧನೆ ಮಾಡುತ್ತಿದ್ದರು. ದಿನಾ ಬೆಳಗ್ಗೆ ಎದ್ದು ಒಂದಷ್ಟು ಹೂವನ್ನು ಕಿತ್ತು ಗೋಡೆಗೆ ಸಾಲಾಗಿ ಜೋಡಿಸಿದ ದೇವರ ಫೋಟೋಗಳಿಗೆ ಇಡುತ್ತಿದ್ದರು. ರಾಯರ ಫೋಟೋಗೆ ಹೆಚ್ಚು ಹೂವು ಇಡುತ್ತಿದ್ದರು. ದೇವರಿಗೆ ದೀಪ ಇಟ್ಟು ರಾತ್ರಿ ಎಲ್ಲರು ಸೇರಿ ಭಜನೆ ಹೇಳುವ ಕಾರ್ಯಕ್ರಮ ಇತ್ತು. ಭಜನೆ ಹೇಳದಿದ್ದರೆ ಊಟ ಹಾಕುತ್ತಿರಲಿಲ್ಲ. ಬೆಳಗ್ಗೆ ನಾನು ದೇವರಿಗೆ ದೀಪ ಇಟ್ಟರೆ ತಾಯಿಯವರು ಅಗರಬತ್ತಿಯ ಆರತಿ ಮಾಡು ವುದು ಇತ್ತು. ಇಲ್ಲೂ ರಾಯರಿಗೆ ಹೆಚ್ಚು ಹೊತ್ತು ಹೊಗೆ ತೋರಿಸುತ್ತಿದ್ದರು. ತುಂಬಾ ಹೊತ್ತು ಕೈ ಮುಗಿದು ಏನೋ ಅವರಲ್ಲಿ ಕೇಳಿದಂತೆ ಭಾಸವಾಗುತ್ತಿತ್ತು.
ಡಿಗ್ರಿ ಓದುತ್ತಿದ್ದ ಕಾಲವದು. ತಾಯಿಯವರು ದಿನಾ ರಾಯರಲ್ಲಿ ಏನೋ ಬೇಡುವ ಭಂಗಿಯನ್ನು ನೋಡಿ ನೀವೇನು ಬೇಡುತ್ತಿದ್ದೀರಿ ಎಂದು ನಾನು ಪ್ರಶ್ನಿಸಿದಾಗ ಅದು ನಿನಗೇಕೆ ಎಂಬ ಉತ್ತರವನ್ನು ಕೊಡುತ್ತಿದ್ದರು. ದಿನಾ ಆತುರದಿಂದ ಕೇಳಿದಾಗ “ಯಾರಿಗೂ ಸರ್ಕಾರದ ಕೆಲಸ ಇಲ್ಲ. ನೀನು ಚೆನ್ನಾಗಿ ಓದಬೇಕು. ಚೆನ್ನಾಗಿ ಬರೆ ಯಬೇಕು. ನೀನು ಸರಕಾರದ ಉದ್ಯೋಗ ಪಡೆಯ ಬೇಕೆಂಬ ಆಶೆ ನನ್ನದು” ಎಂದಾಗ ನನಗೆ ಮಾತೇ ಬರಲಿಲ್ಲ. ತಾಯಿಯ ಮನಸ್ಸು ಹೇಗಿರುತ್ತದೆ ಎಂದು ಇಲ್ಲಿ ತಿಳಿಯ ಬಹುದಾಗಿದೆ. ತುಂಬಾ ರಾತ್ರಿ ಹೊತ್ತು ಮಗ ಓದುತ್ತಾನೆ ಎಂದು ದಿನಾ ರಾತ್ರಿ ಹಸುವಿನ ಹಾಲು ಕೊಡುತ್ತಿದ್ದರು.
ಡಿಗ್ರಿ ಪಾಸಾಗಿ ಬ್ಯಾಂಕಿನಲ್ಲಿ ಉದ್ಯೋಗ ಸಿಕ್ಕಿದಾಗ ಅವರಿಗಾದ ಖುಷಿ ಹೇಳ ತೀರದು. ತಂದೆ ತಾಯಿ ಇಬ್ಬರೂ ಮಗನಿಗೆ ಸರಕಾರದ ಉದ್ಯೋಗ ಸಿಕ್ಕಿದೆ ಎಂದು ಪ್ರಚಾರ ಮಾಡುತ್ತಿದ್ದ ದೃಶ್ಯ ಕಾಣುತ್ತದೆ. ಹೊಸದಾಗಿ ಉದ್ಯೋಗ ಪಡೆದು ಬಹು ದೂರದ ಒರಿಸ್ಸ ರಾಜ್ಯಕ್ಕೆ ತೆರಳುವಾಗ ಅವರ ಕಣ್ಣುಗಳಿಂದ ಇಳಿದ ಕಣ್ಣೀರ ಧಾರೆಯನ್ನು ಈಗಲೂ ಕಾಣುತ್ತೇನೆ. ಬೇರೆ ಯವರ ಮನೆಯಲ್ಲಿ ಊಟ ಮಾಡಬೇಡ. ಹೋಟೆಲಲ್ಲಿ ತಿನ್ನ ಬೇಡ ಎಂಬ ಮಾತುಗಳು ಕಿವಿಗಳಿಗೆ ಕೇಳಿಸುತ್ತಿದೆ. ಅಂದು ರಾಘವೇಂದ್ರ ಸ್ವಾಮಿಗಳವರಲ್ಲಿ ಬೇಡಿದ ತಾಯಿಯ ವರವನ್ನು ರಾಯರು ನನಗೆ ಕೊಟ್ಟಿದ್ದರಿಂದ ಓದುತ್ತಾ ಬರೆಯುತ್ತಾ ಹೋದೆ. ಮೂರು ಪ್ರತಿಷ್ಠಿತ ಡಿಗ್ರಿ ಯನ್ನು ಪಡೆದೆ. ಬರೆಯುವ ಓದುವ ಹವ್ಯಾಸ ಬೆಳೆಸಿ ಕೊಂಡೆ.
ಹೆತ್ತವರನ್ನು ಕಾರಿನಲ್ಲಿ ಮೈಸೂರು ಪೂರ ಸುತ್ತಾಡುವ ಸಮಯದಲ್ಲಿ ಅವರಿಗಾದ ಸಂತೋಷದ ಕ್ಷಣ ಕ್ಷಣದ ದೃಶ್ಯ ಮರೆಯಲಾಗದು. ಗುಂಡ್ಲುಪೇಟೆ ಪಕ್ಕದ ಗೋಪಾ ಲಸ್ವಾಮಿ ಬೆಟ್ಟಕ್ಕೆ ಪ್ರಯಾಣಿಸುವಾಗ ನಮ್ಮ ಬಸ್ ಕೆಟ್ಟು ಹೋಗುತ್ತೆ. ತಾಯಿ ದೇವರಿಗೆ ಬೆಟ್ಟ ಹತ್ತಲು ಆಗದೆ ಉಬ್ಬಸ ಬರಲಾರಂಭಿಸಿತು. ಇನ್ನೂ ಎರಡು ಕಿಲೋ ಮೀಟರ್ ದೂರದಲ್ಲಿದೆ ಗೋಪಾಲಕೃಷ್ಣ ಸ್ವಾಮಿ ದೇವಾಲಯ. ಇದೂ ನನ್ನ ಭಾಗ್ಯ ಎಂದು ತಾಯಿ ದೇವರನ್ನು ಎರಡೂ ಕೈಗಳಿಂದ ಎತ್ತಿ ಕೊಂಡು ಬೆಟ್ಟ ಹತ್ತಿದ ನೆನಪು. ಅವರ ಕಣ್ಣುಗಳಿಂದ ಹೊರ ಸೂಸಿದ ಖುಷಿಯ ಕಣ್ಣೀರು ದೇವರ ತೀರ್ಥದಂತೆ ಅಂದು ಕಂಡಿತ್ತು.
ತಾಯಿ ದೇವರು ಇಹಲೋಕ ತ್ಯಜಿಸುವ ಮುಂಚಿನ ದಿನ ನನ್ನ ಹೆಂಡತಿಯ ಹತ್ತಿರ “ನೋಡು ಇವನು ತುಂಬ ಕಷ್ಟ ಪಟ್ಟಿದ್ದಾನೆ.ಅವನ ಹಿಂದಿನ ಪತ್ನಿಯ ಎರಡು ಮಕ್ಕಳನ್ನು ಚೆನ್ನಾಗಿ ಸಾಕು. ನಿನಗೂ ಒಂದು ಮಗು ಅಗತ್ಯವಾಗಿ ಬೇಕು. ಅದನ್ನು ಪಡೆಯುತ್ತಿ. ಅವನೇ ಖರೀದಿಸಿದ ಜಾಗದಲ್ಲಿ ಮನೆ ಮಾಡಿ. ದೇವರ ಲೀಲೆ ಯನ್ನು ಯಾರೂ ಅರಿಯಲು ಸಾಧ್ಯವಿಲ್ಲ. ನಿನ್ನ ಕರ್ತವ್ಯವನ್ನು ಪರಿಪೂರ್ಣ ಮಾಡು. ನನ್ನ ಮಗ ಶ್ರವಣ ಕುಮಾರನಂತೆ ನನ್ನನ್ನು ಎತ್ತಿ ಬೆಟ್ಟದ ಕೃಷ್ಣ ಪರಮಾತ್ಮ ದೇವರನ್ನು ತೋರಿಸಿದ್ದಾನೆ” ಎಂದು ಅವಳ ತಲೆ ಸವರಿ ದ್ದಾರೆ. ನನಗೆ ಜನ್ಮ ಕೊಟ್ಟ ಭಾನುವಾರದ ದಿನ ಬೆಳಗ್ಗೆ ಉಸಿರು ಚೆಲ್ಲುತ್ತಾರೆ. ಎಲ್ಲರಿಗೂ ಆ ದಿನ ರಜಾದಿನ ಆಗಿತ್ತು. ತಂದೆಯವರು ಮರಣ ಹೊಂದಿದ ದಿನ ಹೆಚ್ಚು ಅಳುವನ್ನು ತೋರಿಸದೆ “ನೀವು ಮುಂದೆ ಹೋಗಿ. ಹಿಂದಿನಿಂದ ಬೇಗನೆ ನಿಮ್ಮನ್ನು ಸೇರುವೆ” ಎಂದಿದ್ದರು. ಅವರ ಮಾತಿನಂತೆ ಮೂರು ತಿಂಗಳಲ್ಲೇ ತಾಯಿ ದೇವರು ತಂದೆಯವರನ್ನು ಸೇರುತ್ತಾರೆ.
ನನ್ನ ತಂದೆ,ತಾಯಿ,ಅತ್ತೆ ಈ ಮೂವರನ್ನು ವಿಮಾನ ದಲ್ಲಿ ಕೂರಿಸಿಲ್ಲ ಎಂಬ ಕೊರಗು ನನ್ನನ್ನು ತಿನ್ನುತ್ತಲೇ ಇದೆ. ಸೌಲಭ್ಯ ಇದ್ದರೂ ಅದನ್ನು ಅವರಿಗೆ ಬಳಸಿಲ್ಲ ಏಕೆ ಎಂಬ ಪ್ರಶ್ನೆ ಉತ್ತರಿಸಲಾಗದೆ ಉಳಿದು ಹೋಯಿತು. ಆ ಸೌಲಭ್ಯವನ್ನು ಅವರಿಗೂ ನೀಡುತ್ತಿದ್ದರೆ ಅವರೆಷ್ಟು ಕೊಂಡಾಡುತ್ತಿದ್ದರು ಎಂದು ಹೇಳಲಾಗದು. ತಪ್ಪಾಗಿ ಹೋಯಿತು ಕ್ಷಮಿಸಿ🙏
ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)